ಒಂದು ಕಾಲದಲ್ಲಿ ಬೆಂಗಳೂರಿಗೆ ನೀರಿನ ಸೆಲೆಯಾಗಿದ್ದ ತಿಪ್ಪಗೊಂಡನಹಳ್ಳಿ ಅಣೆಕಟ್ಟನ್ನು ಪುನರುಜ್ಜೀವನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಶ್ಲಾಘನೀಯ. ಅಲ್ಲಿನ ಹೂಳೆತ್ತಲು ಮುಂದಾಗುವುದರ ಜೊತೆಗೆ ಸುತ್ತಲಿನ ಕಾವೇರಿಯ ಉಪನದಿಗಳೆಡೆಗೆ ತುರ್ತಾಗಿ ಗಮನಹರಿಸಬೇಕಿದೆ. ದೂರದ ಎತ್ತಿನಹೊಳೆಯ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹೊತ್ತುತರುವ ಕಾರ್ಯದಲ್ಲಿ ಆಗುತ್ತಿರುವ ಅರಣ್ಯನಾಶಕ್ಕೆ ಸಾಕ್ಷಿಯಾಗಿದ್ದೇವೆ. ತಿಪ್ಪಗೊಂಡನಹಳ್ಳಿಗೆ ನೀರು ತರಲು ಎತ್ತಿನಹೊಳೆಯ ಮೇಲೆ ಮತ್ತಷ್ಟು ಭಾರ ಹಾಕುವುದನ್ನು ನಿಲ್ಲಿಸಿ, ಅರ್ಕಾವತಿ ಪಾತ್ರವನ್ನು ಶುಚಿಗೊಳಿಸಿದರೆ ಲಾಭದಾಯಕವಾಗಬಲ್ಲದು. ಕುಮುದ್ವತಿ, ಮಂಗಳಮುಖಿ, ಅರ್ಕಾವತಿ ನದಿಗಳು ಸೇರಿದಂತೆ ಹೆಸರಘಟ್ಟದಂತಹ ದೊಡ್ಡಕೆರೆಗಳೇ ತಿಪ್ಪಗೊಂಡನಹಳ್ಳಿಯ ಮೂಲಾಧಾರ. ಮಳೆಗಾಲದಲ್ಲಿ ಕೆರೆ–ಕೆರೆ ಸೇರಿ, ದೊಡ್ಡನದಿಯಂತೆ ಹರಿದು ತಿಪ್ಪಗೊಂಡನಹಳ್ಳಿ ಸೇರಿದ್ದನ್ನು ಕಂಡೇ ನಮ್ಮ ಹಿರಿಯರು ಅಲ್ಲಿ ಡ್ಯಾಂ ನಿರ್ಮಿಸಿರುವುದು.